ಬುಧವಾರ, ಜುಲೈ 28, 2010

ಆಲದ ಮರ


ಆಲದ ಮರ, ಬೇರುಜಾಲದ ಮರ ಒಂದು ಜಾತಿಯ ಅತ್ತಿ, ಅಂಜೂರಗಳ ಗುಂಪಿನ ಮರ. ಇದನ್ನು ಬನಿಯನ್ ಮರ ಎಂದು ಮೊದಲಿಗೆ ಪೋರ್ಚುಗೀಸರಿಗೆ ಪರಿಚಯವಾದದ್ದು, ಬಹುಶಃ ಅಖಂಡ ಭರತ ಖಂಡದ ಸಮಯದ ನಮ್ಮ ನೆಲಕ್ಕೆ ಸಂಬಂಧಿಸಿದ ಮರ ಎನ್ನಬಹುದು. ಬನಿಯ-ಎಂದರೆ ವ್ಯಾಪಾರಿ ಎಂದು ಗುಜರಾತಿ, ಹಿಂದಿ ಭಾಷಿಗರು ಹೇಳುವುದು ನಮಗೆಲ್ಲಾ ತಿಳಿದದ್ದೇ. ಗುಜರಾತಿಗಳು ಸನಾತನ ಕಾಲದಿಂದಲೂ ವ್ಯಾಪಾರಿಗಳಾಗಿಯೇ ಹೆಚ್ಚು ಪ್ರಸಿದ್ಧರು ಎಂದು ಇತಿಹಾಸ ಹೇಳುತ್ತದೆ.
 

ಇದು ಮೂಲತಃ ಪರಾವಲಂಬಿ ಸಸ್ಯ. ಇದರ ಹಣ್ಣು ಹಕ್ಕಿ ಪಕ್ಷಿಗಳ ಬಹು ಪ್ರಿಯ ಆಹಾರ, ಇದೇ ಕಾರಣದಿಂದ ಇದರ ಬೀಜ ಪ್ರಸಾರ ಪ್ರಮುಖವಾಗಿ ಪಕ್ಷಿಗಳ ಮೂಲಕ ಆಗುತ್ತದೆ. ಬೀಜಗಳ ಚೆಲ್ಲುವಿಕೆ ಅಥವಾ ಪಕ್ಷಿಗಳ ಮಲದ ಮೂಲಕ (ಬೀಜಗಳು ಬಹುಪಾಲು ಜೀರ್ಣವಾಗದೇ ವಿಸರ್ಜಿತವಾಗುವುದರಿಂದ) ವೃಕ್ಷಗಳ, ಬೆಟ್ಟ ಗುಡ್ಡಗಳ ಮುಂತಾದೆಡೆ ಅಂಕುರಿಸಿ..ಬೆಳೆಯುತ್ತದೆ. ಇತರ ವೃಕ್ಷಗಳ ಕಾಂಡ, ಪೊಟರೆಗಳು ಬೀಜಾಂಕುರ ಮತ್ತು ಸಸಿ ಬೆಳವಣಿಗೆಗೆ ಸಹಕಾರಿಯಾಗಿರುತ್ತವೆ, ಬೇರುಗಳನ್ನು ಕೆಳಮುಖವಾಗಿ ಹರಡುವ ಈ ಸಸಿ ನಿಧಾನವಾಗಿ ಬೆಳೆದು ಆ ಮೂಲಕ ಹರಡಲಾರಂಭಿಸಿ ಮೂಲ ಆಶ್ರಯ ನೀಡಿದ ಸಸ್ಯ ಅಥವಾ ವೃಕ್ಷ ಕಾಣದಾಗುತ್ತದೆ. ಒಮ್ಮೆ ಬೆಳೆದು ಮರವಾದ ಆಲ, ತನ್ನ ರೆಂಬೆಗಳನ್ನು ಭೂಮಿಗೆ ಸಮಾನಾಂತರವಾಗಿ ಹರಡುತ್ತದೆ, ಆ ರೆಂಬೆಯಿಂದ ಒಂದೆರಡು ಶಾಖೆಕೆಳಮುಖವಾಗಿ ಬೆಳೆಸಿಕೊಂಡು ನೆಲವೂರಿದ ಮೇಲೆ ಬೇರುಬಿಟ್ಟು ಆ ರೆಂಬೆ ಮತ್ತೊಂದು ಮರಕ್ಕೆ ಕಾಂಡವಾಗುತ್ತದೆ, ಕಾಂಡಗಳ ಬೆಳವಣಿಗೆ, ಹರಡುವಿಕೆ, ಮತ್ತೆ ಅವುಗಳಿಂದ ಬೇರುಗಳ ಪಸರುವಿಕೆ ಹೀಗೆ..ಮರ ಹೆಮ್ಮರವಾಗಿ ಹಲವಾರು ಎಕರೆ ಹರಡುತ್ತದೆ. ಆ ಕಾರಣದಿಂದಲೇ ಈ ಮರಕ್ಕೆ ಆಯಸ್ಸು ...ಬಹಳ ಹೆಚ್ಚು....ಚಿರಾಯು ಎಂತಲೇ ಹೇಳಬಹುದು.
 

ಇಂತಹ ಆಲದ ಮರ ಏಕೆ ಬೀಳುತ್ತದೆ..? ಒಂದು ಸಾಧ್ಯತೆ ಹೊಸ ಕಾಂಡಗಳ ಬೆಳವಣಿಗೆ ಬಲವಂತವಾಗಿ ಅಥವಾ ಇತರೆ ಕಾರಣಗಳಿಂದ ಕುಂಠಿತಗೊಂಡರೆ, ಮೂಲ ಕಾಂಡಗಳ ಶಕ್ತಿ ಕುಸಿಯುತ್ತದೆ  ಮೂಲ ಬೇರುಗಳ ಹರಡುವಿಕೆಯೂ ಕುಸಿಯಿತ್ತದೆ ಹೀಗಾಗಿ ಶಕ್ತಿಗುಂದಿ ಧರೆಗುರುಳಬಹುದು.

ಮಂಗಳವಾರ, ಜುಲೈ 27, 2010

ಪರಿಸರ ದಿನಾಚರಣೆ.

ಪರಿಸರ ದಿನಾಚರಣೆ... ಎಂದರೆ??
• ಆ ಒಂದು ದಿನ ಗಿಡ ನೆಟ್ಟು, ನೀರುಣಿಸಿ, ಫೋಟೋ ತೆಗೆಸಿಕೊಳ್ಳುವುದೆ?
• ಆ ಒಂದು ದಿನ ಸುತ್ತಮುತ್ತಲು ಬಿದ್ದಿರಬಹುದಾದ ಪ್ಲಾಸ್ಟಿಕ್ ದೂರ ಹಾಕುವುದೆ
• ಆ ಒಂದು ದಿನ ಎಲ್ಲೆಲ್ಲೂ, ಎಲ್ಲರಿಗೂ ಸಸಿಗಳನ್ನು ಹಂಚುವುದೆ?
• ಆ ಒಂದು ದಿನ ಸಸಿ ನೆಡುವ ಕಾರ್ಯಕ್ರಮಕ್ಕೆಲ್ಲ ಹಾಜರಾಗುವುದೆ?
• ಇಷ್ಟೇನಾ ಪರಿಸರ ದಿನಾಚರಣೆಯ ಮಹತ್ವ?!


''ಗಿಡಗಳನ್ನು ನಾವು ಉಳಿಸಿದರೆ ಗಿಡಗಳು ನಮ್ಮನ್ನು ಉಳಿಸುತ್ತವೆ'' ಜಾಗತಿಕ ತಾಪಮಾನ ಮುಂಬರುವ ದಿನಗಳಲ್ಲಿ ಪ್ರತಿಯೊಂದು ರಾಷ್ಟ್ರಕ್ಕೂ ಒಂದು ಸವಾಲು ನಿರ್ಮಿಸುತ್ತದೆ. ಪರಿಸರ ಉಳಿಸುವಿಕೆ ಹಾಗೂ ಬೆಳೆಸುವಿಕೆ ಇ ನಿಟ್ಟಿನಲ್ಲಿ ಉತ್ತಮ ವಿಧಾನ. ಎಲ್ಲರೂ ಪರಿಸರ ಉಳಿಸಲು ಕಂಕಣ ಬದ್ಧರಾಗೋಣ.

ಸೋಮವಾರ, ಜುಲೈ 26, 2010

ಮರ

    ಮರ ಎಂದರೆ ಅತ್ಯಂತ ದೊಡ್ಡ ಸಸ್ಯ. ಕೆಲವು ಮರಗಳು ೩೦೦ ಅಡಿಗಳಿಗಿಂತಲೂ ಎತ್ತರಕ್ಕೆ ಬೆಳೆಯುತ್ತವೆ. ಸಾವಿರ ವರ್ಷಗಳಿಗಿಂತಲೂ ಹೆಚ್ಚು ಕಾಲ ಬಾಳಿದ ಮರಗಳೂ ಇರುವುದು ಕಂಡು ಬಂದಿದೆ.ಅತ್ಯಂತ ದೀರ್ಘಕಾಲ ಬದುಕಿರುವ ಜೀವಿಗಳಲ್ಲಿ ಮರಗಳಿಗೆ ಅಗ್ರ ಸ್ಥಾನ.
        ಮರಗಳನ್ನು ಇತರ ಸಸ್ಯಗಳಿಂದ ಹಲವಾರು ರೀತಿಯಿಂದ ಬೇರ್ಪಡಿಸಬಹುದು.ಮೊದಲನೆಯದಾಗಿ ಮರಗಳು ನೆಟ್ಟಗೆ ತಮ್ಮ ಬಲದಿಂದಲೇ ನೆಲದಿಂದ ನಿಲ್ಲುತ್ತವೆ.ಮರಗಳಿಗೆ ಕಾಂಡ ಇದೆ. ಕಾಂಡಗಳು ಕಡಿಮೆ ಎಂದರೆ ೧೦ ಸೆ.ಮೀ.ದಪ್ಪ ಬೆಳೆಯುತ್ತವೆ. ಮರಗಳು ಕಡಿಮೆ ಎಂದರೆ ೪ ಮೀಟರ್ ನಷ್ಟು ಬೆಳೆಯುತ್ತವೆ.
  ಪ್ರಪಂಚದ ಅತ್ಯಂತ ಎತ್ತರಕ್ಕೆ ಬೆಳೆಯುವ ಮರದ ಪ್ರಜಾತಿಯಾದ ಸೆಕೋಯ

ಭಾನುವಾರ, ಜುಲೈ 25, 2010

ನೀರು ನೀರು ನೀರು


ನೀರು ಎಲ್ಲ ಜೀವಿಗಳಿಗೆ ಅಗತ್ಯವಾದ ರುಚಿ-ರಹಿತ ಮತ್ತು ವಾಸನಾ-ರಹಿತ ವಸ್ತು. ಇದು ಭೂಮಿಯ ಮೇಲ್ಮೈಯ ಶೇ. ೭೦ ಭಾಗಗಳಲ್ಲಿ ಕಂಡುಬರುತ್ತದೆ. ಪ್ರಪಂಚದಲ್ಲಿ ಒಟ್ಟು ೧೪೦ ಕೋಟಿ ಘನ ಕಿಮೀ ಗಳಷ್ಟು ನೀರು ವಿವಿಧ ರೂಪಗಳಲ್ಲಿ ಇದೆಯೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಬಹಳಷ್ಟು ಭಾಗ ಸಮುದ್ರಗಳಲ್ಲಿ, ಧ್ರುವ ಪ್ರದೇಶಗಳಲ್ಲಿ ಘನ ರೂಪದಲ್ಲಿ, ಹಾಗೂ ಮೋಡ, ನೀರಾವಿ ಮೊದಲಾದ ರೂಪಗಳಲ್ಲಿದೆ.

ನೀರಿನ ರಾಸಾಯನಿಕ ಸೂತ್ರ H2O - ಎಂದರೆ ಒಂದು ಅಣು ನೀರಿನಲ್ಲಿ ಎರಡು ಜಲಜನಕ ಅಣುಗಳು ಹಾಗೂ ಒಂದು ಆಮ್ಲಜನಕದ ಅಣು ಇರುತ್ತವೆ. ಹೆಚ್ಚಿನ ಪ್ರಮಾಣದ ನೀರು ಒಟ್ಟಿಗೆ ಇರುವಾಗ ತಿಳಿನೀಲಿ ಬಣ್ಣ ಪಡೆಯುತ್ತದೆ. ಇದಕ್ಕೆ ಕಾರಣ ನೀರು ಕೆಂಪು ಬಣ್ಣದ ಬೆಳಕನ್ನು ಅಲ್ಪ ಪ್ರಮಾಣದಲ್ಲಿ ಹೀರಿಕೊಂಡು ನೀಲಿ ಬೆಳಕನ್ನು ಹೆಚ್ಚಾಗಿ ಚದುರಿಸುವುದೇ ಆಗಿದೆ.

ನೈಸರ್ಗಿಕವಾಗಿ, ನೀರು ಅನೇಕ ರೂಪಗಳಲ್ಲಿ ಕಂಡುಬರುತ್ತದೆ. ಸಾಗರದಲ್ಲಿ ನೀರು ಮತ್ತು ಮಂಜು ಗೆಡ್ಡೆಗಳ ರೂಪದಲ್ಲಿ, ಆಕಾಶದಲ್ಲಿ ನೀರಾವಿ ಮತ್ತು ಮೋಡಗಳ ರೂಪದಲ್ಲಿ, ಭೂಮಿಯ ಮೇಲೆ ನದಿಗಳು ಮತ್ತು ಮಂಜು-ಹಿಮಗಳ ರೂಪದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ಕರಗುವಿಕೆ, ಆವಿಯಾಗುವಿಕೆ, ಮಳೆ ಮತ್ತು ಹರಿಯುವಿಕೆಗಳ ಕಡೆಯಿಂದ ನೀರು ಒಂದು ರೂಪದಿಂದ ಇನ್ನೊಂದಕ್ಕೆ ರೂಪಾಂತರ ಪಡೆಯುತ್ತಾ ಇರುತ್ತದೆ.

ಶನಿವಾರ, ಜುಲೈ 24, 2010

ನೀಲಗಿರಿ ಮರ


ನೀಲಗಿರಿ ಯು ವೇಗವಾಗಿ-ಬೆಳೆಯುವ ಕಾಡಿನ ಮೂಲವಾಗಿದ್ದು, ಇದರ ತೈಲವನ್ನು ಶುದ್ಧೀಕರಣಕ್ಕಾಗಿ ಬಳಸಬಹುದಾಗಿದೆ ಹಾಗೂ ಇದು ಒಂದು ನೈಸರ್ಗಿಕ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ. ಇದರ ತೈಲವನ್ನು ಕೆಲವೊಮ್ಮೆ ಜೌಗುನೆಲಗಳನ್ನು ಒಣಗಿಸಲು, ತನ್ಮೂಲಕ ಮಲೇರಿಯಾದ ಅಪಾಯವನ್ನು ತಗ್ಗಿಸಲು ಬಳಸಲಾಗುತ್ತದೆ.

ನೀಲಗಿರಿ ಮರಗಳು ಅನೇಕ ಉಪಯೋಗಗಳನ್ನು ಹೊಂದಿದ್ದು, ಈ ಉಪಯೋಗಗಳ ದೆಸೆಯಿಂದಾಗಿ ಅವು ಆರ್ಥಿಕವಾಗಿ ಮುಖ್ಯವಾದ ಮರಗಳಾಗಿ ಮಾರ್ಪಟ್ಟಿವೆ. ಅಷ್ಟೇ ಅಲ್ಲ ಬಡ ಪ್ರದೇಶಗಳಲ್ಲಿ ಇವು ಒಂದು ವಾಣಿಜ್ಯ ಬೆಳೆಯಾಗಿ ಮಾರ್ಪಟ್ಟಿವೆ. ನೀಲಗಿರಿ ಮರಗಳ ವೇಗದ ಬೆಳವಣಿಗೆಯಿಂದಾಗಿ ಅವು ಗಾಳಿತಡೆಕಾರಕಗಳಾಗಿ ಬಳಕೆಯಾಗಲು ಸೂಕ್ತವಾಗಿವೆ ಮತ್ತು ಸವಕಳಿಯ ಪ್ರಮಾಣವನ್ನು ತಗ್ಗಿಸಲು ನೀಲಗಿರಿ ಮರಗಳು ಬಳಕೆಯಾಗುತ್ತದೆ. ಬಾಷ್ಪ ವಿಸರ್ಜನೆಯ ಪ್ರಕ್ರಿಯೆಯ ಮೂಲಕ ನೀಲಗಿರಿ ಮರಗಳು ಮಣ್ಣಿನಿಂದ ಒಂದು ಮಹತ್ತರವಾದ ಪ್ರಮಾಣದಲ್ಲಿ ನೀರನ್ನು ಎಳೆದುಕೊಳ್ಳುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಜಲಸ್ತರವನ್ನು ಕಡಿಮೆಮಾಡಲು ಹಾಗೂ ಮಣ್ಣಿನ ಉಪ್ಪುಗೂಡಿಕೆಯನ್ನು ತಗ್ಗಿಸಲು ಅವುಗಳನ್ನು ನೆಡಲಾಗಿದೆ. ಆಲ್ಜೀರಿಯಾ, ಲೆಬನಾನ್, ಸಿಸಿಲಿ ಮೊದಲಾದ ಕಡೆಗಳಲ್ಲಿ, ಮತ್ತೊಂದೆಡೆ ಯುರೋಪ್, ಮತ್ತು ಕ್ಯಾಲಿಫೋರ್ನಿಯಾದಲ್ಲಿ ಮಣ್ಣನ್ನು ಒಣಗಿಸುವ ಮೂಲಕ ಮಲೇರಿಯಾವನ್ನು ತಗ್ಗಿಸುವ ಒಂದು ವಿಧಾನವಾಗಿಯೂ ನೀಲಗಿರಿ ಮರಗಳನ್ನು ಬಳಸಿಕೊಂಡು ಬರಲಾಗಿದೆ. ಒಣಗಿಸುವಿಕೆಯು ಜೌಗುನೆಲಗಳನ್ನು ನಿರ್ಮೂಲನಗೊಳಿಸುತ್ತದೆಯಾದರೂ, ಉತ್ಪನ್ನಕಾರಕವಾಗಿರುವ ಪ್ರದೇಶಗಳನ್ನೂ ಇದು ನಾಶಪಡಿಸಬಲ್ಲುದಾಗಿದೆ. ಈ ಒಣಗಿಸುವಿಕೆಯು ಕೇವಲ ಮಣ್ಣಿನ ಮೇಲ್ಮೈಗೆ ಮಾತ್ರವೇ ಸೀಮಿತಗೊಂಡಿದೆ. ಏಕೆಂದರೆ, ನೀಲಗಿರಿ ಬೇರುಗಳು ...೨.೫ m ನಷ್ಟು ಉದ್ದದವರೆಗಿನ ಬೇರುಗಳನ್ನು ಹೊಂದಿದ್ದು, ಅವು ಭೂಮಿಯಡಿ ಇರುವ ವಲಯವನ್ನು ತಲುಪುವುದಿಲ್ಲ; ಹೀಗಾಗಿ ಮಳೆನೀರು ಅಥವಾ ನೀರಾವರಿ ವ್ಯವಸ್ಥೆಯು ಮಣ್ಣನ್ನು ಮತ್ತೆ ತೇವಗೊಳಿಸಬಲ್ಲವು.

ನೀಲಗಿರಿ ತೈಲವನ್ನು ಅದರ ಎಲೆಗಳಿಂದ ಅನಾಯಾಸವಾಗಿ ಆವಿ ಬಟ್ಟಿ ಇಳಿಸಲಾಗುತ್ತದೆ ಮತ್ತು ಈ ತೈಲವನ್ನು ಶುದ್ಧೀಕರಣ, ವಾಸನೆಯನ್ನು ಕಳೆಯುವಿಕೆ ಮೊದಲಾದವುಗಳಿಗಾಗಿ ಬಳಸಬಹುದಾಗಿದೆ. ಅಷ್ಟೇ ಅಲ್ಲ, ಆಹಾರದ ಪೂರಕಗಳಲ್ಲಿ, ಅದರಲ್ಲೂ ವಿಶೇಷವಾಗಿ ಸಿಹಿತಿಂಡಿಗಳು, ಕೆಮ್ಮಿನ ಪೆಪ್ಪರ್ಮೆಂಟುಗಳಲ್ಲಿ ಹಾಗೂ ರಕ್ತ/ಮೂಗು ಕಟ್ಟಿರುವಿಕೆಯನ್ನು ನಿವಾರಿಸುವ ಔಷಧಿಗಳಲ್ಲಿ ಅತ್ಯಂತ ಅಲ್ಪ ಪ್ರಮಾಣದಲ್ಲಿ ನೀಲಗಿರಿ ತೈಲವನ್ನು ಬಳಸಲಾಗುತ್ತದೆ. ಇದು ಕೀಟ ನಿವಾರಕ ಗುಣಗಳನ್ನೂ ಹೊಂದಿದೆ, ಮತ್ತು ಕೆಲವೊಂದು ವಾಣಿಜ್ಯೋದ್ದೇಶದ ಸೊಳ್ಳೆ ನಿವಾರಕಗಳಲ್ಲಿ ಇದೊಂದು ಕ್ರಿಯಾಶೀಲ ಘಟಕವಾಗಿದೆ.

ಕೆಲವೊಂದು ನೀಲಗಿರಿ ಮರಗಳ ಮಕರಂದವು ಉನ್ನತ-ಗುಣಮಟ್ಟದ ಜೇನನ್ನು ಉತ್ಪಾದಿಸುತ್ತದೆ. ರೇಷ್ಮೆ ಮತ್ತು ಉಣ್ಣೆಯಂಥ ಪ್ರೋಟೀನು ನಾರುಗಳ ಮೇಲೆ ಗಟ್ಟಿಯಾಗಿ ನಿಲ್ಲುವ ವರ್ಣದ್ರವ್ಯಗಳನ್ನು ತಯಾರಿಸಲು ನೀಲಗಿರಿ ಯ ಎಲ್ಲಾ ಭಾಗಗಳನ್ನೂ ಬಳಸಿಕೊಳ್ಳಬಹುದು. ಸಸ್ಯದ ಭಾಗವನ್ನು ನೀರಿನ ಜೊತೆಯಲ್ಲಿ ಸಂಸ್ಕರಿಸುವುದರ ಮೂಲಕ ಅತ್ಯಂತ ಸರಳ ವಿಧಾನದಲ್ಲಿ ವರ್ಣದ್ರವ್ಯವನ್ನು ತಯಾರಿಸುವುದನ್ನು ಈ ಪ್ರಕ್ರಿಯೆಯು ಒಳಗೊಳ್ಳುತ್ತದೆ. ಹೀಗೆ ಸಾಧಿಸಲ್ಪಡುವ ಬಣ್ಣಗಳ ಶ್ರೇಣಿಯು ಹಳದಿ ಮತ್ತು ಕಿತ್ತಳೆಯಿಂದ ಮೊದಲ್ಗೊಂಡು ಹಸಿರು, ಕಂದುಬಣ್ಣ, ಚಾಕೊಲೇಟ್ ಮತ್ತು ಗಾಢವಾದ ತುಕ್ಕು ಕೆಂಪಿನ ಬಣ್ಣದಾದ್ಯಂತ ಇರುತ್ತದೆ. ಸಂಸ್ಕರಣದ ನಂತರ ಉಳಿಯುವ ಸಾಮಗ್ರಿಯನ್ನು ಹಸಿಗೊಬ್ಬರವಾಗಿ ಅಥವಾ ರಸಗೊಬ್ಬರವಾಗಿ ಕ್ಷೇಮಕರವಾಗಿ ಬಳಸಬಹುದು. ಗರಗಸದ ಕಾರ್ಖಾನೆಯ ಕೆಲಸಗಾರಿಕೆ, ತಿರುಳು, ಇದ್ದಿಲು ಸಂಬಂಧಿ ಕೆಲಸಗಳು ಮತ್ತು ಇತರ ಕೆಲಸಗಳಂಥ ಹಲವಾರು ಉದ್ಯಮಗಳಿಗೆ ನೀಲಗಿರಿ ಗಳು ಆಧಾರವಾಗಿವೆ.

ಸರ್ ಜೋಸೆಫ್ ಬ್ಯಾಂಕ್ಸ್ ಎಂಬ ಸಸ್ಯವಿಜ್ಞಾನಿಯೊಬ್ಬ 1770ರಲ್ಲಿ ಕೈಗೊಂಡ ಕುಕ್ ವಿಶೇಷ ಕಾರ್ಯಯಾತ್ರೆಯ ಸಂದರ್ಭದಲ್ಲಿ ನೀಲಗಿರಿ ಯನ್ನು ಆಸ್ಟ್ರೇಲಿಯಾದಿಂದ ವಿಶ್ವದ ಇತರ ಭಾಗಗಳಿಗೆ ಮೊದಲು ಪರಿಚಯಿಸಿದರು. ತರುವಾಯ ಇದು ವಿಶ್ವದ ಅನೇಕ ಭಾಗಗಳಿಗೆ ಪರಿಚಯಿಸಲ್ಪಟ್ಟಿತು. ಮತ್ತು ನೆಡುತೋಪುಗಳಲ್ಲಿ ನೆಡಲ್ಪಟ್ಟಿವೆ.

ಗುರುವಾರ, ಜುಲೈ 22, 2010

ಬರಿದಾದ ಭೂಮಿಯ ಮಡಿಲು ತುಂಬಿದವರು


ಲೇಖನ ಕೃಪೆ: ಸಂಯುಕ್ತ ಕರ್ನಾಟಕ
 ಈಗ ಈ ಭೂ ತಾಯಿ, ಕೆಲವು ದಶಕಗಳಿಂದೀಚೆಗೆ ಕಾದ ಕೆಂಡದಂತೆ ‘ಜ್ವರ’ ಪೀಡಿತಳಾಗಲು ಆಕೆಯ ಮಕ್ಕಳೇ ಕಾರಣ. ಆಕೆಗೇನಾದರೂ ಸ್ವಲ್ಪ ಹೆಚ್ಚು ಕಡಿಮೆಯಾದರೂ ತಾವಾರೂ ಉಳಿಯುವುದಿಲ್ಲ ಎಂಬ ಪರಿಜ್ಞಾನವೂ ಇಲ್ಲದೆ, ಆಕೆಯ ಶುಶ್ರೂಷೆಯನ್ನೂ ಮಾಡದೆ ಆಕೆಯ ಸಕಲ ‘ಸಂಪತ್ತು, ಆಸ್ತಿ ಪಾಸ್ತಿ’ಗಳನ್ನೆಲ್ಲ ದೋಚಿ ‘ದೊಡ್ಡವ’ರಾಗಲು ಹವಣಿಸುತ್ತಿದ್ದಾರೆ.
ಆದರೆ ಈ ಮಕ್ಕಳಲ್ಲಿ ಕೆಲವು ‘ಪರೋಪಕಾರ’ ಸ್ಮರಣೆಯ ಕೃತಜ್ಞರು, ತಜ್ಞರು, ಪರಿಸರ ವಾದಿಗಳು ಇತ್ಯಾದಿ ಕಡಿಮೆ ಸಂಖ್ಯೆಯವರು ಮಾತ್ರ ಆತಂಕದಿಂದ ತಮ್ಮ ‘ತಾಯಿ’ಯ ಜ್ವರ ಇಳಿಸಿ ಆಕೆಯನ್ನು ಆರೋಗ್ಯವಂತಳನ್ನಾಗಿ ಮಾಡಲು ಆಕೆಗೆ “ವಿವಿಧ ಮಾತ್ರೆಗಳನ್ನು ನುಂಗಿಸುವ” ತಮ್ಮ ಕೈಲಾದ ಎಲ್ಲ ಪ್ರಯತ್ನ ಮುಂದುವರೆಸಿದ್ದಾರೆ. ಅಂತಹ ಜಾಗತಿಕ ಪ್ರಯತ್ನಗಳಲ್ಲಿ ಪ್ರಾಕೃತಿಕ ಅರಣ್ಯ ಬೆಳೆಸುವ ಮೂಲಕ ‘ಬಿ.ಸಿ.ಆರ್.ಟಿ. ಎಂಬ ಮಾತ್ರೆ’ಯೊಂದನ್ನು ಭೂ ತಾಯಿಯ ಬಾಯಿಗೆ ಹಾಕುವ ಪ್ರಯತ್ನವೂ ಒಂದಾಗಿದೆ! ಆ ಮೂಲಕ ‘ಜೀವ ವೈವಿಧ್ಯತೆ’ ಸೃಷ್ಟಿಸಿ ಭೂ ತಾಯಿಯ ಋಣ ತೀರಿಸುವ ಮಕ್ಕಳ ಸಾಲಿಗೆ ಹಾಸನ ತಾಲ್ಲೂಕು ಅನುಗನಾಳು ಎಂಬ ಕುಗ್ರಾಮಕ್ಕೆ ಸೇರಿದ  ಡಾ. ಮಳಲಿಗೌಡರು ಹಾಗೂ ಅವರ ಸಹೋದರರಲ್ಲಿ ಒಬ್ಬರಾದ ಕೃಷ್ಣಮೂರ್ತಿಯೂ ಸೇರುತ್ತಾರೆ!

ಬಿ.ಸಿ.ಆರ್.ಟಿ. ಎಂದರೆ- ‘ಬಯೋ ಡೈವರ್ಸಿಟಿ ಕನ್ಸರ್ವೇಶನ್ ಅಂಡ್ ರೀಸರ್ಚ್ (ಜೀವ ವೈವಿಧ್ಯ ಸಂರಕ್ಷಣೆ ಹಾಗೂ ಸಂಶೋಧನಾ) ಟ್ರಸ್ಟ್’. ಇದೊಂದು ಲಾಭ ರಹಿತ ಪರಿಸರ ಸಂಘಟನೆ. ಹಾಸನದಿಂದ ಬೇಲೂರಿಗೆ ಹೋಗುವ ಹೆದ್ದಾರಿ ಬದಿಯ ಕ್ರಾಸ್‌ನಲ್ಲಿ ಇಳಿದು ಎಡಭಾಗ ಹೋದರೆ ಅನುಗನಾಳು ಸಿಗುತ್ತದೆ. ಹಾಸನದಿಂದ ಸುಮಾರು ೧೪ ಕಿ.ಮೀ ಅಷ್ಟೆ. ಈ ಗ್ರಾಮ ಇದೀಗ ಜಗತ್ತಿನ ಪರಿಸರ ಪ್ರಿಯರ ಗಮನ ಸೆಳೆದಿದೆ. ಗ್ರಾಮದ ರೈತ ರಂಗೇಗೌಡರ ಸುಶಿಕ್ಷಿತ ಮಕ್ಕಳಾದ ೩೯ ವರ್ಷದ ಸ್ನಾತಕೋತ್ತರ ಕೃಷಿ ಪಿ‌ಎಚ್‌ಡಿ ಪದವೀಧರ ಡಾ. ಮಳಲಿಗೌಡರು ಈಗ ಅಮೆರಿಕದಲ್ಲಿದ್ದಾರೆ. ಅವರು ವಿದೇಶಕ್ಕೆ ತೆರಳುವ ಮುನ್ನ ಸ್ವಗ್ರಾಮದಲ್ಲಿ ಮಾಡಿ ಹೋದ ಕೆಲಸ ಮಾತ್ರ ಅದ್ವಿತೀಯವೇ ಸರಿ. ಇಲ್ಲಿಯೇ ಇರುವ ಅವರ ಸಹೋದರ ಬಿ.ಕಾಂ. ಪದವೀಧರ ಕೃಷ್ಣಮೂರ್ತಿ, ಅಣ್ಣನನ್ನು ಅನುಸರಿಸಿ ಅವರೊಂದಿಗೆ ಕೈ ಜೋಡಿಸಿದರು. ಇಬ್ಬರೂ ನಿಸರ್ಗ ಪ್ರೇಮಿಗಳು ೬ ವರ್ಷಕ್ಕೂ ಹಿಂದೆ ಗ್ರಾಮಸ್ಥರ ಸಹಕಾರದೊಂದಿಗೆ ಈ ಒಂದು ಹೊಸ ‘ಪರಿಸರ ಸಾಹಸಕ್ಕೆ’ ನಾಂದಿ ಹಾಡಿದರು.

   ರೋಚಕ ಕಥೆ: ಗ್ರಾಮದ ಹೊರ ವಲಯದಲ್ಲಿ ಕಲ್ಲು- ಬಂಡೆಗಳ ಸಹಿತ ಬಂಜರಾಗಿ ಬಿದ್ದಿದ್ದ ೧೦ ಎಕರೆ ‘ಕೆಲಸಕ್ಕೆ ಬಾರದ’ ಹಳ್ಳ ದಿಣ್ಣೆಗಳ ಸರ್ಕಾರಿ ಭೂಮಿಯಲ್ಲಿ ಅರಣ್ಯೀಕರಣ ಮಾಡುವ ಸಾಹಸಕ್ಕೆ ಇವರು ಕೈ ಹಾಕಿದರು. ೨೦೦೧ ಜೂನ್‌ನಲ್ಲಿ ಸಾಕಷ್ಟು ಸಂಖ್ಯೆಯ ಎಲ್ಲ ಜಾತಿಯ ಗಿಡಗಳನ್ನು ಅಲ್ಲಿ ನೆಟ್ಟು ಆರಂಭಿಕ ಪೋಷಣೆ ನೀಡಿದರು, ಕಣ್ಗಾವಲಿಟ್ಟು ಕಾದರು.

‘ಬಿಸಿ‌ಆರ್‌ಟಿ’ ಬೆಳೆಸಲು ಡಾ. ಮಳಲಿಗೌಡರು ತಮ್ಮ ಉನ್ನತ ಶಿಕ್ಷಣಕ್ಕೆಂದು ದೊರೆತಿದ್ದ ೧ ಲಕ್ಷ ರೂ. ವಿದ್ಯಾರ್ಥಿ ವೇತನದಲ್ಲೇ ಒಂದು ಪಾಲು ಮೀಸಲಿಟ್ಟರು. ಜೊತೆಗೆ ನರ್ಸರಿಯನ್ನೂ ಮಾಡಿ ಗಿಡಗಳನ್ನು ರಿಯಾಯ್ತಿ ದರಕ್ಕೆ ಮಾರಾಟ ಮಾಡಿ ಅಷ್ಟೋ ಇಷ್ಟೋ ಹಣ ಸಂಗ್ರಹಿಸಿ ಇದಕ್ಕಾಗಿ ವಿನಿಯೋಗಿಸಿದರು. ಖರ್ಚು ಹೆಚ್ಚಾದಾಗ ತಮ್ಮ ಸ್ವಂತ ಹಣವನ್ನೂ ಬಂಡವಾಳವಾಗಿ ತೊಡಗಿಸಿದರು.

೧೦ ಎಕರೆಯಲ್ಲಿ  ನೆಡಲ್ಪಟ್ಟ ಸಸ್ಯ ಸಂಕುಲದ ‘ಮಿನಿ ಅರಣ್ಯ’ದ  ಜವಾಬ್ದಾರಿ ಹೊರಲು ಸಂಸ್ಥೆಯೊಂದು ಬೇಕೆನಿಸಿತು. ಈ ಚಿಂತನೆ ಫಲವಾಗಿ ೫ ತಿಂಗಳ ನಂತರ ಅದೇ ವರ್ಷ (೨೦೦೧) ಡಿಸೆಂಬರ್‌ನಲ್ಲಿ ಈ ‘ಬಿ.ಸಿ.ಆರ್.ಟಿ.’ ಸಂಸ್ಥೆಯನ್ನು ಡಾ. ಮಳಲಿಗೌಡರು ಸ್ಥಾಪಿಸಿದರು.


ವೈವಿಧ್ಯತೆ ಮಹತ್ವ: ಒಂದು ನಿರ್ದಿಷ್ಟ ಪ್ರದೇಶದಲ್ಲಿ ಪ್ರಾಕೃತಿಕವಾಗಿ ಜನರ ಸಹಭಾಗಿತ್ವದಲ್ಲಿ ಜೀವ ವೈವಿಧ್ಯತೆ ಬೆಳೆಸುವ ಈ ಪ್ರಯತ್ನ, (ಜಾಗತಿಕ ಮಟ್ಟಕ್ಕೆ ಹೋಲಿಸಿದಾಗ ‘ಸಣ್ಣದು’ ಎನಿಸಿದರೂ) ದೇಶಕ್ಕೆ ದೊಡ್ಡದು ಹಾಗೂ ಕರ್ನಾಟಕದಲ್ಲೇ ಪ್ರಪ್ರಥಮ ಎನಿಸುವ ಬಹು ದೊಡ್ಡ ಸಾಧನೆ. ಏಕೆಂದರೆ ಅರಣ್ಯಗಳ ಮಹತ್ವ ತಿಳಿದವರಿಗೆ ಮಾತ್ರ ಇದು ಅರ್ಥವಾಗುತ್ತದೆಯೇ ಹೊರತು, ಉತ್ಪ್ರೇಕ್ಷೆಯಂತೂ ಅಲ್ಲ.
ಸಸ್ಯ ಸಂಕುಲ ಮಾನವನಿಗೆ ಆಮ್ಲಜನಕ ಪೂರೈಸುವ ಮೂಲಕ ‘ಜೀವ’ ನೀಡುತ್ತವೆ. ಮಣ್ಣಿನ ಸವಕಳಿ ತಡೆಗಟ್ಟುತ್ತವೆ. ಅಲ್ಲದೆ, ಆಹಾರ, ನೀರು, ನೆರಳು (ಮನೆ), ಬಟ್ಟೆ, ಉದ್ಯಮಗಳಿಗೆ ಬೇಕಾದ ಪರಿಕರಗಳು ಇತ್ಯಾದಿ ಏನೆಲ್ಲ ಕೊಟ್ಟು ಪೋಷಿಸುತ್ತಿವೆ. ‘ದ್ಯುತಿ ಸಂಶ್ಲೇಷಣೆ’ ಎಂಬ ನಿಗೂಢ ಕ್ರಿಯೆ ಮೂಲಕ ಸಸ್ಯಗಳು ತಮ್ಮ ಆಹಾರ ತಾವೇ ತಯಾರಿಸಿಕೊಂಡು ಮನುಷ್ಯನಿಗೆ ಹಗಲು ವೇಳೆ ಆಮ್ಲಜನಕ ನೀಡುತ್ತವೆ. ಎಷ್ಟು ಪ್ರಮಾಣ ನೀಡುತ್ತವೆ ಎಂಬುದು ಪ್ರತಿ ಗಿಡದಿಂದ ಗಿಡಕ್ಕೆ; ಮರದಿಂದ ಮರಕ್ಕೆ ಅವುಗಳ ವಯಸ್ಸಿಗೆ ಅನುಗುಣವಾಗಿ ಇದು ವ್ಯತ್ಯಾವಿದೆ. ಹೀಗಾಗಿ ಪ್ರತಿ ದಿನ ಬಿಡುಗಡೆ ಆಗುವ ಟನ್‌ಗಟ್ಟಲೆ ಆಮ್ಲಜನಕದ ಪ್ರಮಾಣವನ್ನು ನಿರ್ಧಿಷ್ಟವಾಗಿ ಹೇಳಲಾಗದು.ಆದರೂ, ೧ ಹೆಕ್ಟೇರ್ ಅರಣ್ಯ ಒಂದು ದಿನಕ್ಕೆ ೩ ಟನ್ ಇಂಗಾಲದ ಡೈಯಾಕ್ಸೈಡ್ ಹೀರಿಕೊಂಡು ೨ ಟನ್ ಆಮ್ಲಜನಕ ವಿಸರ್ಜಿಸುತ್ತವೆ ಎಂಬ ಅಂದಾಜಿದೆ. ಮತೊಂದು ಲೆಕ್ಕಾಚಾರದ ಪ್ರಕಾರ ೧ ಗಿಡದ ೧ ಎಲೆ ೧ ಗಂಟೆಗೆ ೫ ಮಿ.ಲೀ. ಆಮ್ಲಜನಕ ನೀಡುತ್ತದೆ. ಎಲ್ಲ ಮರ ಗಿಡಗಳು ಹಗಲು ಆಮ್ಲಜನಕ ಹಾಗೂ ರಾತ್ರಿ ಇಂಗಾಲದ ಡೈಯಾಕ್ಸೈಡ್ ಬಿಡುಗಡೆ ಮಾಡಿದರೆ, ವಿಶೇಷವಾಗಿ ಅರಳಿ ಮರ ಮಾತ್ರ ದಿನದ ೨೪ ಗಂಟೆಯೂ ೧ ಗಂಟೆಗೆ ೩೬೦೦ ಕೆ.ಜಿ. ಆಮ್ಲಜನಕವನ್ನೇ ಉಗುಳುತ್ತದೆ! ಅದಕ್ಕಾಗಿಯೇ ಭಾರತೀಯರು ಅನಾದಿ ಕಾಲದಿಂದ ಅರಳಿಯನ್ನು  ಪೂಜ್ಯ ಸ್ಥಾನದಲ್ಲಿಟ್ಟು ಪೋಷಿಸುತ್ತಿದ್ದಾರೆ!  ಹಾಗೆ ನೋಡಿದರೆ, ಈ ನಿಸರ್ಗದಲ್ಲಿ ತನ್ನ ಜೀವ, ಆಹಾರ, ಬದುಕು ಮತ್ತಿತರ ಜೀವನೋಪಾಯಕ್ಕಾಗಿ ಮನುಷ್ಯನೇ ‘ಪರಾವಲಂಬಿ’ಯಾಗಿದ್ದಾನೆ. ದ್ಯುತಿ ಸಂಶ್ಲೇಷಣೆ, ಪರಾಗ ಸ್ಪರ್ಶ ಇತ್ಯಾದಿ ನಿಗೂಢ ಕ್ರಿಯೆಗಳನ್ನೆಲ್ಲ ಮಾನವನೇ ಮಾಡಿ ತೋರಿಸಿಬಿಡಲಿ ನೋಡೋಣ!?
ಈ ಜಗತ್ತಿನಲ್ಲಿ ಮಾನವ ಮಾತ್ರವೇ ‘ಜೀವಿ’ಯಲ್ಲ; ಕೋಟ್ಯಾಂತರ ಸಸ್ಯ- ಪ್ರಾಣಿ ಸಂಕುಲವೇ ಅಲ್ಲದೆ, ಭೂಮಿಯ ಪ್ರತಿ ಕಣ ಕಣದಲ್ಲೂ ಜೀವ ಇದೆ. ಇಂತಹ ‘ಜೀವ’ ಅಥವಾ ‘ಚೇತನ’ ಎಂದರೆ ಏನು ಅಥವಾ ಅದರ ಮೂಲ ಯಾವುದು ಎಂಬ ಮೂಲಭೂತ ಪ್ರಶ್ನೆಗೆ ಇನ್ನೂ ಉತ್ತರವೇ ಸಿಕ್ಕಿಲ್ಲ. ‘ಜೀವಿ’ ಹುಟ್ಟಿದ ನಂತರ ಒಂದಲ್ಲ ಒಂದು ದಿನ ಸಾಯಲೇಬೇಕು; ಹಾಗೂ ಅಲ್ಲಿಯವರೆಗೆ ಜೀವ ವೈವಿಧ್ಯತೆಯ ‘ಜೀವನ ಚಕ್ರ’ದಲ್ಲಿ ಒಂದಕ್ಕೊಂದು ಪೂರಕವಾಗಿ ಸಮತೋಲನ ಕಾಪಾಡಿಕೊಂಡು ಜೀವಿಸಬೇಕು ಎಂಬುದಷ್ಟೆ ಈಗ ಗೊತ್ತಿರುವ ಸತ್ಯ. ಆದರೆ ತಾನೊಬ್ಬ ಮಾತ್ರ ‘ಚೆನ್ನಾಗಿ ಜೀವಿಸಬೇಕು’ ಎಂಬ ಅಜ್ಞಾನದ ದುರಾಸೆಯಿಂದ ಮಾನವ ಬೇರೆ ಜೀವಿಗಳ ವಿನಾಶ ಮಾಡಲು ಹೊರಟು, ಈ ಜೀವ ಚಕ್ರದ ಸಮತೋಲನ ಕೆಡಿಸುತ್ತಿದ್ದಾನೆ.


ಯಶಸ್ಸಿನ ಕಥೆ: ಆರಂಭದಲ್ಲಿ ಅನುಗನಾಳು ಬಿ.ಸಿ.ಆರ್.ಟಿ. ಬಂಜರು ಭೂಮಿಯ ಮೇಲೆ ನೈಸರ್ಗಿಕವಾಗಿ ಹುಲ್ಲು ಬೆಳೆಯಲಿಕ್ಕೇ ೨ ವರ್ಷ ಕಾಲಾವಧಿ ಬೇಕಾಯಿತು. ಹೀಗೆಯೇ ನೈಸರ್ಗಿಕ ಪರಿವರ್ತನೆ ಸಾಗುತ್ತಾ ಹೋಯಿತು. ಮರ ಗಿಡಗಳಿಂದ ಉದುರಿದ ಎಲೆ, ಕಸ, ಕಡ್ಡಿಗಳು ನೆರಳಿನ ತಂಪು ತೇವಾಂಶದೊಂದಿಗೆ ಮಣ್ಣಿನಲ್ಲಿ ಕರಗಿ ಗೊಬ್ಬರವಾಗಿ, ಹದವಾಗಿ ಬೆರೆತು ಸಾವಯವ ಚಟುವಟಿಕೆಗೆ ನಾಂದಿ ಹಾಡಿತು. ಮಣ್ಣು ಹಾಗೂ ತೇವಾಂಶ ಭೂಮಿಯಲ್ಲೇ ಭದ್ರವಾಗಿ ಹಿಡಿದಿಡಲ್ಪಟ್ಟು, ಎರೆಹುಳು ಸೇರಿದಂತೆ ಅನೇಕ ವಿವಿಧ ಸಣ್ಣ ಹುಳು ಹುಪ್ಪಟೆ ಸೇರಿಕೊಂಡು ಸಾವಯವ ನೈಸರ್ಗಿಕ ವಿಭಜನೆಯ ಕ್ರಿಯೆ ಸಾಗುತ್ತಾ ಮಣ್ಣಿನ ಫಲವತ್ತತೆ ಹೆಚ್ಚಿತು.

ಕೆಲವು ನಿರ್ದಿಷ್ಟ ಮರ ಗಿಡಗಳಿಂದ ಆಕರ್ಷಿಸಲ್ಪಟ್ಟು ೩೪ ಜಾತಿಯ ವಿವಿಧ ಪಕ್ಷಿಗಳು ಬಂದು ಸೇರಿದವು. ಜತೆಗೆ ಕ್ರಿಮಿ ಕೀಟಾದಿಗಳಿಂದಾಗಿ ಕ್ರಮವಾಗಿ ನೈಸರ್ಗಿಕ ಬೀಜ ಪ್ರಸಾರ ಹಾಗೂ ಪರಾಗ ಸ್ಪರ್ಷ ಚಟುವಟಿಕೆ ಆರಂಭಗೊಂಡಿತು. ಇದೀಗ ಬಿಸಿ‌ಆರ್‌ಟಿ ಅರಣ್ಯದಲ್ಲಿ ೧೦-೧೨ ಜಾತಿಯ ಹೊಸ ಮರಗಳು ತಾವಾಗಿಯೇ ಹುಟ್ಟಿ ಬೆಳೆದಿವೆ; ಮುಂದೆ ದೊಡ್ಡ ಮರಗಳಾಗಿ ಬೆಳೆಯಬಲ್ಲ ಆಲ, ಅರಳಿಯಂತಹ ಗಿಡಗಳು  ತಾವಾಗಿ ಬೆಳೆಯುತ್ತಿವೆ. ಇದೆಲ್ಲವುಗಳ ಫಲವಾಗಿ ಇದೀಗ ಬಿಸಿ‌ಆರ್‌ಟಿ ದಟ್ಟ ಅರಣ್ಯವೇ ಆಗಿ ರೂಪು ತಾಳಿದೆ! ಒಂದು ದಿನ ಇದ್ದಕ್ಕಿದ್ದಂತೆ ನವಿಲುಗಳು ಇಲ್ಲಿ ಕಾಣಸಿಕೊಂಡವು! ಇನ್ನೂ ಏನೇನು ಪ್ರಾಣಿ ಪಕ್ಷಿಗಳು ಏಕೆ ಮತ್ತು ಹೇಗೆ ಇಲ್ಲಿಗೆ ಬಂದು ಸೇರುತ್ತವೋ ಆ ನಿಸರ್ಗಕ್ಕೇ ಗೊತ್ತು!
ಕೆಲವೇ ವರ್ಷಗಳ ಹಿಂದೆ ಹಳ್ಳ-ದಿಣ್ಣೆ, ಕಲು-ಬಂಡೆಗಳ ಬಂಜರಾಗಿದ್ದ ಇಲ್ಲಿನ ಭೂಮಿಯಲ್ಲೀಗ ಯಾವ ಭಾಗದಲ್ಲಿ ಮಣ್ಣು ಕೆದಕಿದರೂ ಒಳಗೆ ತೇವಾಂಶದ ನಡುವೆ ಸಣ್ಣ ಎರೆ ಹುಳು ಹಾಗೂ ಕ್ರಿಮಿ ಕೀಟಾದಿಗಳು ಓಡಾಡುವುದು ಕಂಡು ಬರುತ್ತದೆ; ದಟ್ಟವಾದ ‘ಝಿರ್’ ಎನ್ನುವ ಕಾಡುಗಳಲ್ಲಿ ಓಡಾಡುತ್ತಿರುವ ಅನುಭವ; ಒಳಭಾಗದಲ್ಲಿ ಒಂದು ರೀತಿ ಮಣ್ಣಿನ ‘ಘಮ್ಮೆನ್ನುವ’ ವಾಸನೆ!

ಈ ಲಕ್ಷ ಕೋಟಿ ವರ್ಷದಲ್ಲಿ ಈವರೆಗೆ ೫ ಬಾರಿ ‘ಪ್ರಾಕೃತಿಕ ವಿನಾಶ’ಗಳು ಸಂಭವಿಸಿದ್ದು, ಹಾಲಿ ಜೀವ ವೈವಿಧ್ಯತೆ ಈಗ ೬ನೇ ಸಮೂಹ ವಿನಾಶಕ್ಕೆ ಸಾಕ್ಷಿಯಾಗುತ್ತಿದೆ; ಕ್ರಿ.ಶ. ೧೫೦೦ ರಿಂದೀಚೆಗೆ ಇಂತಹ ೭೮೪ ವಿನಾಶಗಳು ಸಂಭವಿಸಿವೆ ಎಂದು ‘ಪ್ರಾಕೃತಿಕ ಸಂಪನ್ಮೂಲ ಮತ್ತು ಪ್ರಕೃತಿ ಸಂರಕ್ಷಣಾ ಅಂತಾರಾಷ್ಟ್ರೀಯ ಸಂಘಟನೆ’ (ಅಮೆರಿಕ) ದಾಖಲಿಸಿದೆ;


ಪ್ರಾಕೃತಿಕ ನಿಯಮದಂತೆ ಜೈವಿಕ ಸಮತೋಲನಕ್ಕಾಗಿ ಭೂಮಿಯ ಮೇಲೆ ಶೇ. ೩೩ ರಷ್ಟು ಅರಣ್ಯ ಪ್ರದೇಶ ಇರಲೇಬೇಕು; ಹಿಂದೆ ಇತ್ತು. ಆದರೆ ದುರದೃಷ್ಟವಶಾತ್ ದುರಾಸೆಯ ಮಾನವನ ಅರಣ್ಯ ನಾಶ ಚಟುವಟಿಕೆಯಿಂದಾಗಿ ಇದೀಗ ಈ ಪ್ರಮಾಣ ಶೇ.೧೨ಕ್ಕೆ ಕುಸಿದಿದೆ. ಕಾಡುಗಳನ್ನು ‘ಸಂರಕ್ಷಿಸಲು’ ಅರಣ್ಯ ಇಲಾಖೆ ಕೋಟ್ಯಾಂತರ ರೂ. ಖರ್ಚು ಮಾಡುತ್ತದೆ; ಅರಣ್ಯ- ಅದರಲ್ಲೂ ನೈಸರ್ಗಿಕ ಅರಣ್ಯವನ್ನು ಹೇಗೆ ಬೆಳೆಸಿ ಸಂರಕ್ಷಿಸಬೇಕೆಂಬುದಕ್ಕೆ ಬಹುಷಃ ಈ ಬಿ.ಸಿ.ಆರ್.ಟಿ.ಯೇ ಮಾದರಿ.


ಭೂ ತಾಪಮಾನ ಏರಿಕೆಗೆ ಕಾರಣವಾಗಿರುವ ಮಾನವನ ಮಿತಿ ಮೀರಿದ ದುರಾಸೆಯ ಹಾಗೂ ಐಷಾರಾಮಿ ಚಟುವಟಿಕೆಗಳಿಂದ ಇಂಗಾಲದ ಡೈಯಾಕ್ಸೈಡ್ ಪ್ರಮಾಣ ಹೆಚ್ಚಾಗಿ ಭೂಮಿಯ ಉಷ್ಣತೆ ಒಂದೇ ಸಮನೆ ಏರುತ್ತಿದೆ. ಶೀತ ಪ್ರದೇಶದ ಹಿಮ ಗಡ್ಡೆಗಳು ಕರಗುತ್ತಾ ಸಮುದ್ರದ ಮಟ್ಟ ಏರುತ್ತದೆ. ಬಿಸಿಯಾಗುತ್ತಿರುವ ಭೂಮಿಯ ತಾಪವನ್ನು ಭಾಷಣಗಳ ಉಗುಳಿನಿಂದ ತಂಪು ಮಾಡಲು ಖಂಡಿತ ಸಾಧ್ಯವಿಲ್ಲ. ಹೀಗಾಗಿ ಇಂತಹ ಬಿ.ಸಿ.ಆರ್.ಟಿ.ಗಳು ಆಯಾ ಪ್ರದೇಶದ ಭೌಗೋಳಿಕ ಹವಾಗುಣ, ಮಣ್ಣಿನ ಗುಣಕ್ಕೆ ತಕ್ಕಂತೆ ಪ್ರತಿ ಹಳ್ಳಿಗಳಲ್ಲೂ ರೂಪುಗೊಳ್ಳಬೇಕು. ಆಗ ಮಾತ್ರ ಜೀವ ವೈವಿಧ್ಯತೆ ಉಳಿದು- ಬೆಳೆದು, ಭೂಮಿ ತಂಪಾಗಿ, ‘ಜೀವ ವೈವಿಧ್ಯ ಚಕ್ರ’ ಸಮತೋಲನಗೊಂಡು, ನಾವು ನೀವುಗಳೂ ಸಹ ಉಳಿಯಲು ಸಾಧ್ಯವಾಗುತ್ತದೆ.